KSPSTA

RECENT INFORMATIONS

Search This Blog

Tuesday 6 February 2024

SSLC Science Passing Package 2024

  Mahiti Kanaja       Tuesday 6 February 2024

 Hedding ; Passing and Scoring Package of SSLC Students Science Subject 2023 - 24...


ಪ್ರೀತಿಯ ಎಸೆಸೆಲ್ಸಿ ವಿದ್ಯಾರ್ಥಿಗಳೇ, ನಿಮಗೆಲ್ಲಾ ಮೊದಲಾಗಿ ನಮ್ಮ ಶುಭಾಶಯಗಳು
ನೀವು ನಿಮ್ಮ ಜೀವನದ ಮೊದಲ ಬೋರ್ಡ್ ಪರೀಕ್ಷೆಯನ್ನು ಬರೆಯುತ್ತಿದ್ದೀರಿ. ಇದು ನೀವು ಎದುರಿಸುವ ಮೊದಲ ರಾಜ್ಯಮಟ್ಟದ ಪರೀಕ್ಷೆ. ಮುಂದೆ ನೀವು ಎದುರಿಸುವ ಹಲವು ಬೋರ್ಡ್ ಪರೀಕ್ಷೆಗಳಿಗೆ ಇದು ಖಂಡಿತವಾಗಿಯೂ ಪಂಚಾಂಗ ಆಗುತ್ತದೆ.

2023ರ ಎಸೆಸೆಲ್ಸಿ ಪರೀಕ್ಷೆಗೆ ಈಗಾಗಲೇ ಕ್ಷಣಗಣನೆಯು ಆರಂಭ ಆಗಿದೆ. ಮಾರ್ಚ್ 31, ಶುಕ್ರವಾರ ನಿಮ್ಮ ಪರೀಕ್ಷೆಗಳು ಆರಂಭ ಆಗಲಿವೆ. ನಿಮಗೆ ಕಳೆದ ವರ್ಷ ಮೇ 16ರಿಂದ ಇಂದಿನ ದಿನದವರೆಗೂ ನಿಮ್ಮ ಅಧ್ಯಾಪಕರ ಮಾರ್ಗದರ್ಶನದಲ್ಲಿ ಉತ್ತಮವಾದ ತರಬೇತಿಯು ದೊರಕಿದ್ದು ಪರೀಕ್ಷೆಗೆ ಮಾನಸಿಕವಾಗಿ ಪ್ರಿಪೇರ್ ಆಗ್ತಾ ಇದ್ದೀರಿ. ಹಿಂದಿನ ಮೂರು ವರ್ಷಗಳ ಅವಧಿಯಲ್ಲಿ ಕೊರೊನಾ ಕಾರಣಕ್ಕೆ ನಿಮಗೆ ಬಿಗಿಯಾದ ಪರೀಕ್ಷೆಯೇ ಇಲ್ಲದೆ ಎಲ್ಲರೂ ಪಾಸಾಗಿ ಇಂದು ಹತ್ತನೇ ತರಗತಿಯಲ್ಲಿ ಇದ್ದೀರಿ.

ಆದ್ದರಿಂದ ಈ ವರ್ಷದ ಪರೀಕ್ಷೆಯು ನಿಮಗೆ ನಿಜವಾದ ಅಗ್ನಿಪರೀಕ್ಷೆಯೇ ಆಗಬಹುದು. ಆದರೆ ಆತಂಕ ಮಾಡುವ ಅಗತ್ಯವೇ ಇಲ್ಲ. ಆತಂಕ ಮಾಡಿದರೆ ನಿಮ್ಮ ನಿಜವಾದ ಸಾಮರ್ಥ್ಯವನ್ನು ತೋರಿಸಲು ಸಾಧ್ಯವಾಗದೆ ಹೋಗಬಹುದು. ಆದ್ದರಿಂದ ಕೂಲ್ ಆಗಿ ಒಂದೆಡೆ ಕುಳಿತು ಕೊನೆಯ ಕ್ಷಣದ ಕೆಲವು ಸಿದ್ಧತೆಗಳನ್ನು ಮಾಡಿದರೆ ಗೆಲುವು ಖಂಡಿತ ನಿಮ್ಮದೆ ಆಗುತ್ತದೆ.

ಈ ವರ್ಷ ನಿಮಗೆ ಇನ್ನೂ ಕೆಲವು ಅನುಕೂಲಗಳು ಇವೆ!
1. ಈ ವರ್ಷ ಕೊರೊನಾ ತೊಂದರೆ ಇಲ್ಲದೆ ಇಡೀ ವರ್ಷ ಸರಿಯಾದ ಪಾಠಗಳು ನಡೆದಿವೆ. ಎಲ್ಲ ಕಡೆಯೂ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಹೆಚ್ಚು ಬೆವರು ಹರಿಸಿದ್ದಾರೆ. ಇದು ಖಂಡಿತವಾಗಿ ಪಾಸಿಟಿವ್ ಅಂಶವಾಗಿದೆ.

2. ಈ ವರ್ಷದ ವಿದ್ಯಾರ್ಥಿಗಳು ಕೂಡ ಎಂಟು ಮತ್ತು ಒಂಬತ್ತನೇ ತರಗತಿಗಳಲ್ಲಿ ಕೊರೊನಾ ಕಾರಣಕ್ಕೆ ಸಂತ್ರಸ್ತರಾದ ಕಾರಣ (ಅದು ಸರಕಾರ ಮತ್ತು ಎಸೆಸೆಲ್ಸಿ ಬೋರ್ಡ್ ಇಬ್ಬರಿಗೂ ಗೊತ್ತಿರುವ ಕಾರಣ) ಹೆಚ್ಚು ಸುಲಭವಾದ ಪ್ರಶ್ನೆಪತ್ರಿಕೆಗಳು ಈ ವರ್ಷ ಬರುವ ಎಲ್ಲ ಸಾಧ್ಯತೆಗಳು ಇವೆ. ಎಲ್ಲ ಪ್ರಶ್ನೆಪತ್ರಿಕೆಗಳಲ್ಲಿ ಕಠಿಣತೆಯ ಮಟ್ಟ ಕಡಿಮೆ ಆಗಲಿದೆ ಎನ್ನುವುದು ನಿಮಗೆ ಪೂರಕ.

3. ಗಣಿತ ಮತ್ತು ವಿಜ್ಞಾನದ ವಿಷಯಗಳಲ್ಲಿ ಹಿಂದಿನ ವರ್ಷಗಳಲ್ಲಿ 20% ಕಠಿಣ ಮಟ್ಟದ ಅನ್ವಯ ಪ್ರಶ್ನೆಗಳು ಬರುತ್ತಿದ್ದು ಈ ವರ್ಷ ಅದು ಖಂಡಿತ 15% ಆಗಲಿದೆ. ಅಂದರೆ 80 ಅಂಕಗಳ ಪ್ರಶ್ನೆ ಪತ್ರಿಕೆಯಲ್ಲಿ 12 ಅಂಕಗಳ ಪ್ರಶ್ನೆಗಳು ಮಾತ್ರ ಕಠಿಣ ಆಗಿರಬಹುದು. ಉಳಿದ 68 ಅಂಕಗಳ ಪ್ರಶ್ನೆಗಳು ಸುಲಭ ಮತ್ತು ನೇರ ಆಗಿರುತ್ತವೆ.

4. ವಿಜ್ಞಾನ ವಿಷಯದಲ್ಲಿ 12-14 ಅಂಕಗಳನ್ನು ಚಿತ್ರಗಳ ಮೂಲಕ ಪಡೆಯಲು ಅವಕಾಶ ಇದ್ದು ಇದು ಜಸ್ಟ್ ಪಾಸ್ ಆಗುವ ವಿದ್ಯಾರ್ಥಿಗಳಿಗೆ ವರದಾನ ಆಗಲಿದೆ. ಅದರ ಜೊತೆಗೆ ಬೆಳಕು ಪಾಠದಲ್ಲಿ ಕಿರಣ ಚಿತ್ರಗಳು (Ray Diagrams), ವಿದ್ಯುಚ್ಛಕ್ತಿ ಪಾಠದಲ್ಲಿ ಸರ್ಕ್ಯುಟ್‌ಗಳು, ಓಮನ ನಿಯಮ, ಜೌಲನ ನಿಯಮ ಮೊದಲಾದವುಗಳು ಸುಲಭದಲ್ಲಿ ನಿಮಗೆ ಅಂಕ ತಂದುಕೊಡುತ್ತವೆ.

5. ಗಣಿತದಲ್ಲಿ 8-9 ಅಂಕಗಳು ರಚನೆಗೆ ನಿಗದಿ ಆಗಿದ್ದು ಯಾವ ಸೂತ್ರ, ಗುಣಾಕಾರ, ಭಾಗಾಕಾರ ಇಲ್ಲದೆ ಪಡೆಯಬಹುದಾದ ಅಂಕಗಳು ಇವು. ಇದರ ಜೊತೆಗೆ ಗ್ರಾಫ್ ನಾಲ್ಕು ಅಂಕಗಳು, ಓಜೀವ್ ಮೂರು ಅಂಕಗಳು, ಪ್ರಮೇಯದ ಏಳು ಅಂಕಗಳು ಬೋನಸ್ ನಿಮಗೆ!

6. ಯಾವುದೇ ವಿಷಯದಲ್ಲಿ 45 ಅಂಕಗಳನ್ನು ಗುರುತು ಮಾಡುವುದು ಸುಲಭ ಈ ವರ್ಷ. ಯಾವುದೇ ಪರಿಣತ ಅಧ್ಯಾಪಕರು 45 ಅಂಕಗಳನ್ನು ಪಟ್ಟಿ ಮಾಡಲು ನಿಮಗೆ ಸಹಾಯ ಮಾಡಬಹುದು. ಅಷ್ಟನ್ನು ಇನ್ನು ಕೂಡ ಕಲಿಯಲು ಸಮಯ ಇದೆ!

7. ಪ್ರತೀ ವಿಷಯದ ಮಾದರಿ ಪ್ರಶ್ನೆಗಳನ್ನು ನಿಮ್ಮ ಅಧ್ಯಾಪಕರಿಂದ ಪಡೆಯಿರಿ. ಪ್ರತೀ ವಿಷಯದಲ್ಲಿ ಒಂದೆರಡು ಪ್ರಶ್ನೆಪತ್ರಿಕೆಗಳನ್ನು ಬಿಡಿಸಲು ಇನ್ನೂ ಸಮಯ ಇದೆ. ಅವುಗಳನ್ನು ಉತ್ತರಿಸಿ ಆದನಂತರ ನಿಮ್ಮ ಅಧ್ಯಾಪಕರಿಂದ ಮೌಲ್ಯಮಾಪನ ಮಾಡಿಸಿಕೊಳ್ಳಲು ಮರೆಯಬೇಡಿ.

8. ಎಸೆಸೆಲ್ಸಿ ಪರೀಕ್ಷೆಯ ವೇಳಾಪಟ್ಟಿಯು ಈ ವರ್ಷ ನಿಮಗೆ ತುಂಬಾ ಅನುಕೂಲ ಇದೆ. ಎಲ್ಲ ವಿಷಯಗಳ ಪರೀಕ್ಷೆಗಳ ಮಧ್ಯದಲ್ಲಿ ಭರ್ಜರಿಯಾಗಿ ರಜೆ ದೊರೆತಿದೆ. ಇದು ನಿಮ್ಮ ಅಧ್ಯಯನಕ್ಕೆ ಅನುಕೂಲ. ಆದ್ದರಿಂದ ಆತಂಕ ಮಾಡದೆ ಓದಿ.

9. ಕಳೆದ ಎರಡು ವರ್ಷಗಳಲ್ಲಿ ಕೊರೊನಾ ಅಲೆಯು ತೀವ್ರವಾಗಿ ಇದ್ದ ಕಾರಣ ಪರೀಕ್ಷಾ ಕೇಂದ್ರದಲ್ಲಿ ವಿಪರೀತವಾದ ಒತ್ತಡ ಇತ್ತು. ಈ ವರ್ಷ ಅಷ್ಟು ಉಸಿರುಗಟ್ಟುವ ವಾತಾವರಣವು ಇರಲಾರದು. ಈ ಬಾರಿಯ ಎಸೆಸೆಲ್ಸಿ ಪರೀಕ್ಷಾ ಕೇಂದ್ರಗಳು ಹೆಚ್ಚು ವಿದ್ಯಾರ್ಥಿಸ್ನೇಹಿ ಆಗಿರುತ್ತವೆ.

10. ಪರೀಕ್ಷೆಯ ಅಂತಿಮ ಹಂತವಾದ ಮೌಲ್ಯಮಾಪನ ಕೂಡ ಈ ಬಾರಿ ವಿದ್ಯಾರ್ಥಿಸ್ನೇಹಿ ಆಗಿರುವ ಎಲ್ಲ ಸಾಧ್ಯತೆಗಳು ನಮಗೆ ಕಾಣುತ್ತಿವೆ. ಈ ಅಂಶ ಕೂಡ ವಿದ್ಯಾರ್ಥಿಗಳಿಗೆ ಅನುಕೂಲ.

ನೀವು ತಕ್ಷಣವೇ ಮಾಡಬೇಕಾದದ್ದು…..

ಇದು ಪಾಸ್ ಆಗಲು ಕಷ್ಟ ಪಡುವ ವಿದ್ಯಾರ್ಥಿಗಳಿಗೆ ಮಾತ್ರ!
1. ನಿಮ್ಮ ಅಧ್ಯಾಪಕರ ಮಾರ್ಗದರ್ಶನ ಪಡೆದು ಪ್ರತೀ ವಿಷಯದಲ್ಲಿ 45 ಅಂಕದ ಪಾಸಿಂಗ್ ಪ್ಯಾಕೇಜ್ ಪ್ರಶ್ನೆಗಳನ್ನು ಪಟ್ಟಿ ಮಾಡಿ. ಅವುಗಳ ಮೇಲೆ ಹೆಚ್ಚು ಫೋಕಸ್ ಮಾಡಿ ಓದಿ.

2. ಇನ್ನು ಪಾಠ 1, ಪಾಠ 2……..ಹೀಗೆ ಓದುವುದನ್ನು ಬಿಟ್ಟು ಪ್ರಶ್ನೆಪತ್ರಿಕೆಗಳನ್ನು ಸ್ವತಂತ್ರವಾಗಿ ಬಿಡಿಸುವುದು ಸೂಕ್ತ. ಬಿಡಿಸಿದ ನಂತರ ಅವುಗಳನ್ನು ನಿಮ್ಮ ಶಿಕ್ಷಕರಿಂದ ಮೌಲ್ಯಮಾಪನವನ್ನು ಮಾಡಿಸಿಕೊಂಡರೆ ಇನ್ನೂ ಒಳ್ಳೆಯದು.

3. ವಿವಿಧ ವಿಷಯಗಳ ಪರಿಣತ ಅಧ್ಯಾಪಕರು ನಡೆಸಿಕೊಡುವ ರೇಡಿಯೋ ಮತ್ತು ಟಿವಿ ಕಾರ್ಯಕ್ರಮಗಳು ತುಂಬಾ ಚೆನ್ನಾಗಿವೆ. ಅವುಗಳನ್ನು ಆಲಿಸಿ.

4. ಭಾಷಾ ವಿಷಯಗಳಲ್ಲಿ ವ್ಯಾಕರಣ (ಗ್ರಾಮರ್) ವಿಭಾಗವು ನಿಮಗೆ ಹೆಚ್ಚು ಗೊಂದಲವನ್ನು ಉಂಟುಮಾಡುವ ವಿಭಾಗ. ಅದಕ್ಕೆ ಪೂರಕವಾದ ಎರಡು ಅಥವ ಮೂರು ಗಂಟೆಗಳ ಒಂದು ತರಗತಿಯು ನಿಮಗೆ ಈಗ ಖಂಡಿತ ಅಗತ್ಯ ಇದೆ. ನಿಮ್ಮ ಅಧ್ಯಾಪಕರನ್ನು ಈ ಬಗ್ಗೆ ವಿನಂತಿ ಮಾಡಿ.

5. ಹಾಗೆಯೇ ಭಾಷಾ ವಿಷಯಗಳಲ್ಲಿ ಪದ್ಯ ಬಾಯಿಪಾಠ, ಸಾರಾಂಶ ಬರೆಯುವುದು, ಪತ್ರ ಲೇಖನ, ಪ್ರಬಂಧ ರಚನೆ, ಸಂದರ್ಭ ಸಹಿತ ಅರ್ಥ ವಿವರಣೆ, ಕವಿ ಕಾವ್ಯ ಪರಿಚಯ, ಗಾದೆ ವಿಸ್ತಾರ ಇವುಗಳು ಹೆಚ್ಚು ಸುಲಭ ಆದವು. ಈ ಅಂಕಗಳನ್ನು ಮಿಸ್ ಮಾಡಿಕೊಳ್ಳಬೇಡಿ. ಅವುಗಳನ್ನು ಈಗಲೂ ನೀವು ಕಲಿಯಬಹುದು.

6. ಪರೀಕ್ಷಾ ಕೇಂದ್ರದಲ್ಲಿ ಮೂರುಕಾಲು ಘಂಟೆ ಕುಳಿತುಕೊಳ್ಳುವುದು ಬಹಳ ದೊಡ್ಡ ತಪಸ್ಸು. ಅದಕ್ಕೆ ಬೆಟ್ಟದಷ್ಟು ತಾಳ್ಮೆ ಬೇಕು. ಅದನ್ನು ಹೆಚ್ಚು ಮಾಡಲು ಮಾನಸಿಕವಾಗಿ ಸಿದ್ಧತೆ ಮಾಡಿ.

7. ನೀವೀಗ ದಿನಕ್ಕೆ ಕನಿಷ್ಠ ಒಂದೆರಡು ಗಂಟೆಗಳ ಕಾಲ ಬರೆಯುವುದನ್ನು ಅಭ್ಯಾಸ ಮಾಡಬೇಕು. ಇದರಿಂದ ಅಕ್ಷರ ಚಂದ ಆಗುತ್ತದೆ ಮತ್ತು ನಿಮ್ಮ ಸೈಕೊಮೋಟಾರ್ ಕೌಶಲವು ವೃದ್ಧಿ ಆಗುತ್ತದೆ ಮತ್ತು ನೆನಪಿನ ಶಕ್ತಿಯು ಜಾಸ್ತಿಯಾಗುತ್ತದೆ.

8. ಮೌನವು ಅತೀ ಹೆಚ್ಚು ಪ್ರಭಾವಶಾಲೀ ಮಾಧ್ಯಮ. ಪರೀಕ್ಷೆ ಸಮೀಪ ಬರುತ್ತಿದ್ದ ಹಾಗೆ ಹೆಚ್ಚು ಹೊತ್ತು ಮೌನ ಆಗಿರಿ. ಮೌನ ಪ್ರಾರ್ಥನೆಗಳು ಹೆಚ್ಚು ಶಕ್ತಿಶಾಲಿ.

9. ಬೆಳಗ್ಗೆ ಎದ್ದು ಸ್ವಲ್ಪ ಹೊತ್ತು Instrumental Music (ಸಿತಾರ್, ವೀಣೆ ಇತ್ಯಾದಿ) ಕೇಳುವುದು ನಿಮ್ಮ ಏಕಾಗ್ರತೆ ಹೆಚ್ಚು ಮಾಡಲು ಉತ್ತಮ ಅಭ್ಯಾಸ. ಏಕೆಂದರೆ ಸಂಗೀತಕ್ಕೆ ನಿಮ್ಮ ಮೆಮೊರಿ ಮತ್ತು ಏಕಾಗ್ರತೆ ಎರಡನ್ನೂ ಹೆಚ್ಚು ಮಾಡುವ ಶಕ್ತಿ ಇದೆ. ಮನಸ್ಸು ರಿಲ್ಯಾಕ್ಸ್ ಮಾಡಲು ಕೂಡ ಮ್ಯೂಸಿಕ್ ಹೆಚ್ಚು ಅನುಕೂಲಕರ.

10. ನಿಮ್ಮ ಮೇಲೆ ಬೇರೆ ಯಾರಾದರೂ ಭರವಸೆಯನ್ನು ಇಡುವುದಕ್ಕಿಂತ ನಿಮ್ಮ ಮೇಲೆ ನೀವೇ ಹೆಚ್ಚು ಭರವಸೆ ಇಡುವುದು ಮುಖ್ಯ. ಅದು ಪಾಸಿಟಿವ್ ಥಿಂಕಿಂಗ್ ಮಾಡುವುದರಿಂದ ಸಾಧ್ಯ ಆಗುತ್ತದೆ. ‘ನನಗೆ ಖಂಡಿತ ಸಾಧ್ಯ ಇದೆ’ ಅನ್ನುವುದೇ ನಿಮ್ಮ ಯಶಸ್ಸಿನ ಬೀಜ ಮಂತ್ರ.


ವಿದ್ಯಾರ್ಥಿಗಳಿಗೆ ವಾರ್ಷಿಕ ಪರೀಕ್ಷೆಗಳು ಹತ್ತಿರ ಬರುತ್ತಿವೆ. ದ್ವಿತೀಯ ಪಿ.ಯು.ಸಿ. ವಿದ್ಯಾರ್ಥಿಗಳಿಗೆ ಮಾರ್ಚ್ 1ರಿಂದ ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ಮಾರ್ಚ್ 21ರಿಂದ ಅಂತಿಮ ಪರೀಕ್ಷೆಗಳು ಆರಂಭವಾಗಲಿದೆ. ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ಮಾರ್ಚ್‌ನಲ್ಲಿಯೂ, ಪದವಿ ವಿದ್ಯಾರ್ಥಿಗಳು ಎಪ್ರಿಲ್-ಮೇನಲ್ಲಿಯೂ ತಮ್ಮ ಸೆಮಿಸ್ಟರ್ ಪರೀಕ್ಷೆಗಳನ್ನು ಎದುರಿಸಲಿದ್ದಾರೆ. ಒಟ್ಟಿನಲ್ಲಿ ಫೆಬ್ರವರಿಯಿಂದ ಮೇ ತಿಂಗಳವರೆಗೂ ಪರೀಕ್ಷೆಗಳ ಪರ್ವ. ಹೆತ್ತವರಿಗೆ ಮಕ್ಕಳನ್ನು ಬೆಳಗ್ಗೆ ಎಬ್ಬಿಸುವ ಕೆಲಸ. ಅದಕ್ಕಾಗಿ ಬೆಳಗ್ಗೆ ಏಳುವ ಮೊದಲೇ ಮಕ್ಕಳಿಗೆ ತಾಯಂದಿರಿಂದ ಗದರಿಕೆಯ ಮಾತು. ತಾವಾಗಿಯೇ ಎದ್ದು ತಮ್ಮ ಪಾಡಿಗೆ ತಾವೇ ಓದಿ ಬರೆಯುವ ವಿದ್ಯಾರ್ಥಿಗಳು ಕಡಿಮೆ. ಅವರನ್ನು ಸದಾ ಬೆನ್ನತ್ತುವ ಪಾಲಕರಿಗೆ ತಮ್ಮ ಮಕ್ಕಳು ಬೆಳಗ್ಗೆ ಏಳುತ್ತಿಲ್ಲ, ಓದುತ್ತಿಲ್ಲ, ನನ್ನ ಮಾತು ಕೇಳುತ್ತಿಲ್ಲ ಎಂಬ ಚಿಂತೆಯೇ ಹೆಚ್ಚು. ಹೆತ್ತವರಿಗೂ ಮಕ್ಕಳಿಗೂ ಸದಾ ಸಂಘರ್ಷವಾಗುವ ಸಮಯವೂ ಇದೆ. ಅಂತಿಮ ಕ್ಷಣದಲ್ಲಿ ಒತ್ತಡ ಹೆಚ್ಚಿ ಏನನ್ನೂ ಓದದೇ ಹಿಮ್ಮ್ಮುಖವಾಗುವ ವಿದ್ಯಾರ್ಥಿಗಳಿಗೂ ಕಡಿಮೆಯಿಲ್ಲ. ಅಧ್ಯಾಪಕರಿಗೂ ಬಿಡುವಿಲ್ಲ. ಬೆಳಗ್ಗೆ - ಸಂಜೆ ವಿಶೇಷ ತರಗತಿ, ಮನೆಗೆ ಬಂದ ಮೇಲೆ ಟ್ಯೂಷನ್, ವಸತಿ ಶಾಲೆಯಲ್ಲಿ ರಾತ್ರಿ 10 ರಿಂದ 11 ರವರೆಗೂ ಓದು, ಮೊಬೈಲ್ ವೀಕ್ಷಣೆಗೆ ಕಡಿವಾಣ, ಆಟಗಳಿಗೆ ವಿದಾಯ, ಟಿ.ವಿ.ಗೆ ಕರೆನ್ಸಿ ಹಾಕದ ಹೆತ್ತವರು, ದೂರದಲ್ಲಿರುವ ತಂದೆಯಿಂದ ಪದೇ ಪದೇ ಮಕ್ಕಳ ಬಗ್ಗೆ ವಿಚಾರಣೆ, ಶಾಲಾ ಕಾಲೇಜುಗಳಲ್ಲಿಯೂ ಹೆತ್ತವರ ಸಭೆ, ಅಭಿವೃದ್ಧಿ ಪತ್ರ ಹಿಡಿದುಕೊಂಡೇ ಮನೆಗೆ ದೌಡಾಯಿಸುತ್ತಿರುವ ಪಾಲಕರು, ಇದ್ಯಾವುದರ ರಗಳೆಯೇ ಬೇಡವೆಂದು ತಾವೇ ಸಹಿ ಹಾಕಿ ಅಭಿವೃದ್ಧಿ ಪತ್ರ ಒಪ್ಪಿಸುವ ಕೆಲವು ವಿದ್ಯಾರ್ಥಿಗಳು. ಇವೆಲ್ಲದಕ್ಕೂ ಕೇಂದ್ರ ಬಿಂದು ಪರೀಕ್ಷೆಯೇ ಆಗಿದೆ. ಪರೀಕ್ಷೆಯ ಬಗೆಗಿನ ಆತಂಕ, ನಿರ್ಲಕ್ಷ್ಯ ಕೂಡಾ ಈ ಚಿತ್ರಣಗಳಿಗೆ ಕಾರಣ ಆಗಿದೆ. ವಿದ್ಯಾರ್ಥಿಗಳೇ ಪರೀಕ್ಷೆಯ ಬಗ್ಗೆ ಆತಂಕ ಬೇಡ ಅದನ್ನು ಆಸ್ವಾದಿಸಿ. ಪರೀಕ್ಷೆಯ ಬಗ್ಗೆ ನಿರ್ಲಕ್ಷ್ಯ ಬೇಡ ಅದನ್ನು ಪ್ರೀತಿಸಿ. ಇಷ್ಟವಿಲ್ಲದಿದ್ದರೂ ಕಷ್ಟವಾದರೂ ಶಿಕ್ಷಣ ವ್ಯವಸ್ಥೆಯಲ್ಲಿ ಪರೀಕ್ಷೆಗಳನ್ನು ಬರೆಯುವುದು ಅನಿವಾರ್ಯ. ಯಾವುದು ಅನಿವಾರ್ಯವೋ ಅದನ್ನು ದೂರ ಮಾಡುವ ಬದಲು ಹತ್ತಿರವಾಗಿಸುವುದು ಹೆಚ್ಚು ಉತ್ತಮವಾಗಿದೆ. ಆದುದರಿಂದ ವಿದ್ಯಾರ್ಥಿಗಳೇ ಪರೀಕ್ಷೆಯ ಬಗೆಗಿನ ನಿಮ್ಮ ತಲ್ಲಣಗಳನ್ನು ಒಂದಿಷ್ಟು ದೂರ ಮಾಡಲು ಪಠ್ಯದಿಂದಾಚೆಗಿನ ಕೆಲವು ಸಲಹೆಗಳನ್ನು ಇಲ್ಲಿ ನೀಡಲಾಗುತ್ತದೆ. ಇದು ಕೇವಲ ವಿದ್ಯಾರ್ಥಿಗಳಿಗೆ ಮಾತ್ರ ಸೀಮಿತವಾಗಿರದೆ ಪಾಲಕರಿಗೂ ಅನ್ವಯಿಸಲಿದೆ.

1.ಸಮಯವೇ ಸಂಪತ್ತು ಶಾಲಾ ಕಾಲೇಜುಗಳ ಅಂತಿಮ ತರಗತಿಯ ವಿದ್ಯಾರ್ಥಿಗಳ ಆಟೋಗಾಫ್‌ನಲ್ಲಿ ಬಹುತೇಕ ವಿದ್ಯಾರ್ಥಿ ಪ್ರಿಯ ಬರಹವೊಂದು ಭಾರೀ ಹಿಂದಿನಿಂದಲೂ ಕಾಣಿಸಿಕೊಳ್ಳುತ್ತಿದೆ.. ಅದು ಈಗಲೂ ಮುಂದುವರಿದಿದೆ ಎನ್ನುವುದೂ ಕೂಡಾ ಗಮನಾರ್ಹ. ‘‘ಪರೀಕ್ಷೆಯೆಂಬ ರಣರಂಗದಲ್ಲಿ ಪೆನ್ನೆಂಬ ಖಡ್ಗ ಹಿಡಿದು ಶಾಯಿಯೆಂಬ ರಕ್ತ ಸುರಿಸಿ ನೀನು ವಿಜಯಿಯಾಗು’’ ಇದು ಆ ಒಕ್ಕಣೆ. ಇದನ್ನು ಬರೆಯದವರೂ, ಓದದವರೂ ಕಡಿಮೆ. ಹಿರಿಯರ ಹಳೆಯ ಆಟೋಗ್ರಾಫ್ ತೆಗೆದು ನೋಡಿದರೂ ಈ ವಾಕ್ಯಗಳು ಕಾಣಸಿಗುತ್ತವೆ. ಈಗಿನ ವಿದ್ಯಾರ್ಥಿಗಳು ಆ ಪದವನ್ನು ಹಿರಿಯರಿಂದ ಬಂದ ಬಳುವಳಿ ಎಂಬಂತೆ ಸ್ವೀಕರಿಸಿ ಮುಂದುವರಿಸುತ್ತಿದ್ದಾರೆ. ವಿದ್ಯಾರ್ಥಿಗಳೇ ಪರೀಕ್ಷೆ ಎನ್ನುವುದು ರಣರಂಗ ಅಲ್ಲವೇ ಅಲ್ಲ. ಶಾಯಿಯಂತು ರಕ್ತವೂ ಅಲ್ಲ. ಆದರೆ ಪೆನ್ನು ಖಡ್ಗಕ್ಕಿಂತಲೂ ಹರಿತವಾದುದು ಎಂಬ ಮಾತಿದೆ. ಆದರೆ ಸದ್ಯಕ್ಕೆ ಪೆನ್ನನ್ನು ಖಡ್ಗ ಎಂಬುದಾಗಿ ತಿಳಿದು ಕೊಳ್ಳದೆ ಪೆನ್ನನ್ನು ಪೆನ್ನಾಗಿಯೇ ನೀವು ಬಳಸಿದರೆ ಸಾಕು. ಇಂತಹ ಮಾತನ್ನು ಬರೆದು ಬರೆದೇ ಪರೀಕ್ಷೆಯೆಂದರೆ ಯುದ್ಧವೆಂಬ ಭಾವನೆ ಬಂತೇನೋ? ನಿಜವಾಗಿಯೂ ಪರೀಕ್ಷೆ ಭಯ ಪಡುವಂತಹದ್ದಲ್ಲ. ಪ್ರೀತಿಸುವಂತಹದ್ದು. ನೀವು ಪರೀಕ್ಷೆಯನ್ನು ಶಿಕ್ಷಣದ ಒಂದು ಅಂಗವೆಂದು ಪರಿಗಣಿಸಿ. ನಾವು ಬೆಳಗ್ಗೆ ಎದ್ದು ಸ್ವಚ್ಛವಾಗುವುದು, ಉಪಾಹಾರ ಸೇವಿಸುವುದು, ಬಟ್ಟೆ ಬರೆ ತೊಳೆಯುವುದು, ನೀರು ಕುಡಿಯುವುದು, ನಿದ್ರಿಸುವುದು ಹೇಗೆ ಅನಿವಾರ್ಯವೋ ಹಾಗೇನೆ ಪರೀಕ್ಷೆಯೂ ಕೂಡಾ. ಕೆಲವರಿಗೆ ಬೆಳಗ್ಗೆ ಏಳುವುದು ಕಷ್ಟ ಔದಾಸೀನ್ಯ, ಇಷ್ಟವಲ್ಲದ ವಿಷಯ. ಆದರೆ ತಡವಾಗಿಯಾದರೂ ಏಳಲೇಬೇಕು. ಹಾಗಾದರೆ ಸ್ವಲ್ಪಬೇಗನೆ ನಿಯಮಿತವಾಗಿ ಎದ್ದರೆ ಒಂದಷ್ಟು ಹಗಲು ಹೆಚ್ಚು ಲಭಿಸುತ್ತದೆ. ದಿನಂಪ್ರತಿ 1 ಗಂಟೆ ಬೇಗ ಎದ್ದರೆ ತಿಂಗಳಿಗೆ 30 ಗಂಟೆ ಲಾಭ. ತಿಂಗಳಲ್ಲಿ ಒಂದು ದಿನ ಹೆಚ್ಚುವರಿ ಲಭಿಸುತ್ತದೆ. ಎಲ್ಲರೂ ಹೆಚ್ಚು ಸಮಯ ಬೇಕು ಎಂದು ಆಶಿಸುತ್ತಾರೆ. ಆದರೆ ದಿನಕ್ಕೆ 24 ಗಂಟೆಗಿಂತ ಹೆಚ್ಚು ಯಾರಿಗೂ ಇಲ್ಲ. ವಿದ್ಯಾರ್ಥಿಗಳಿಗೆ ಬೇಗನೇ ಏಳುವ ಪರಿಪಾಠ ಮನೆಯಲ್ಲಿ ಕಲಿಸಿದರೆ ಅವರಿಗೆ ಕಲಿಕೆಗೂ ಪರೀಕ್ಷೆಗೂ ಸಿದ್ಧರಾಗಲು ಸಹಕಾರಿ. ತಡವಾಗಿ ಎದ್ದರೆ ಆ ದಿನ ಹಾಳು. ಅದು ಜಡತ್ವದ ದಿನ. ಯಾವುದರಲ್ಲೂ ಆಸಕ್ತಿಯಿರುವುದಿಲ್ಲ. ನಿಯಮಿತವಾಗಿ ನಿದ್ರಿಸಿ ಬೆಳಗ್ಗೆ ಬೇಗನೆ ಏಳುವ ಪರಿಪಾಠ ಬೆಳೆಸಿಕೊಳ್ಳಿ. ಮುಂಜಾನೆಯೇ ತಮ್ಮ ತಮ್ಮ ಆಹಾರ ಅರಸಿ ಹೋಗುವ ಹಕ್ಕಿಗಳ ಸಾಲನ್ನೊಮ್ಮೆ ನೋಡಿ ಯಾವುದೇ ತರಬೇತಿ, ಶಿಕ್ಷಣ, ವಿಶೇಷ ಬುದ್ಧಿವಂತಿಕೆ ಮಾತು ಇಲ್ಲದೆ ಪ್ರಾಣಿ ಪಕ್ಷಿಗಳೂ ಕೂಡಾ ತಮ್ಮ ತಮ್ಮ ಚಟುವಟಿಕೆಗಳನ್ನು ನಿಯಮಿತವಾಗಿ ಮಾಡುವಾಗ ನಾವೇಕೆ ನಿಯಮಿತವಾಗಿ ಬದುಕುವ ಪರಿಪಾಠ ಬೆಳೆಸಿಕೊಳ್ಳಬಾರದು.


logoblog

Thanks for reading SSLC Science Passing Package 2024

Previous
« Prev Post

No comments:

Post a Comment